ಕೊಂಕಣಿ ನಾರಿಯರ ಯಕ್ಷಧ್ವನಿ
ಲೇಖಕರು : ಉದಯವಾಣಿ
ಮ೦ಗಳವಾರ, ಏಪ್ರಿಲ್ 15 , 2014
|
ಎಪ್ರಿಲ್ 15, 2014
|
ಕೊಂಕಣಿ ನಾರಿಯರ ಯಕ್ಷಧ್ವನಿ
ಮಂಗಳೂರು :
ಕೊಂಕಣಿ ಭಾಷಿಕರು ಯಕ್ಷಗಾನ ಆಟ, ತಾಳಮದ್ದಲೆ ಪ್ರದರ್ಶನಗಳ ಮೂಲಕ ಯಕ್ಷರಂಗದಲ್ಲಿ ಅನೂಹ್ಯ ಛಾಪು ಮೂಡಿಸುತ್ತಿರುವುದು ತಿಳಿದ ವಿಚಾರ. ಆದರೆ, ಜಿಎಸ್ಬಿ ಮಹಿಳೆಯರ ತಂಡವೊಂದು ಯಕ್ಷಮಾತೆಯ ಸೇವೆ ಮಾಡಿ ಯಕ್ಷರಂಗವನ್ನು ನಿಬ್ಬೆರಗಾಗುವಂತೆ ಮಾಡುವಲ್ಲಿ ಸಫಲವಾಗಿದೆ. ಅದು ಶಿವಮೊಗ್ಗೆಯ ವಾಗೆªàವಿ ಕೊಂಕಣಿ ಮಹಿಳಾ ಯಕ್ಷರಂಗ.
ಶಿವಮೊಗ್ಗದಲ್ಲಿ ಕಿರಣ್ ಪೈ ಮತ್ತು ಪ್ರತಿಮಾ ನಾಯಕ್ಅವರ ನೇತೃತ್ವದ ಈ ತಂಡ ಹುಟ್ಟಿದ್ದು 2009ರಲ್ಲಿ. ಪ್ರಾರಂಭದಲ್ಲಿ ಕನ್ನಡದಲ್ಲಿ ಪ್ರದರ್ಶನ ನೀಡಿ ಜನಮನ್ನಣೆ ಗಳಿಸುವಲ್ಲಿ ಯಶಸ್ವಿಯಾಯಿತು. ಒಮ್ಮೆ ಈ ತಂಡದ ಪ್ರದರ್ಶನ ಕಂಡು ಸಂತೋಷಗೊಂಡ ಜಿಎಸ್ಬಿ ಸಮಾಜದ ಹಿರಿಯ ಕಲಾಪ್ರೇಮಿ ಬಸ್ತಿ ವಾಮನ ಶೆಣೈ ಮತ್ತು ಎಚ್. ಸುಬ್ರಾಯ ಮಲ್ಯರು ಕೊಂಕಣಿ ಭಾಷೆಯಲ್ಲಿ ಪ್ರದರ್ಶನ ನೀಡುವಂತೆ ಈ ತಂಡವನ್ನು ಹುರಿದುಂಬಿಸಿ, ಉತ್ತಮ ಫಲಿತಾಂಶ ಪ್ರಾಪ್ತವಾಗುವಂತೆ ಮಾಡಿದರು.
ತದನಂತರ ತಂಡ ಹಿಂದಿರುಗಿ ನೋಡಲೇ ಇಲ್ಲ. ವ್ಯಾಪಕ ಪ್ರೋತ್ಸಾಹದಿಂದಾಗಿ ಬಂಟ್ವಾಳ, ಪಾಣೆ ಮಂಗಳೂರು, ಸುಳ್ಯ, ಬೆಂಗಳೂರು, ಕಾಸರಗೋಡು, ಮುಂಬೈ, ಚೆನ್ನೈ ಮುಂತಾದೆಡೆ ಪ್ರದರ್ಶನ ನೀಡಿ, ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸತೊಡಗಿತು.
ರುಕ್ಮಿಣೀ ಸ್ವಯಂವರ, ವೀರ ಅಭಿಮನ್ಯು, ಸೀತಾಕಲ್ಯಾಣ, ವೀರ ಸುಧನ್ವ ತಂಡ ಪ್ರದರ್ಶನ ನೀಡುವ ಕೆಲ ಪ್ರಸಂಗಗಳು. ಹಿಮ್ಮೇಳವನ್ನು ವೃತ್ತಿಪರ ಅಥವಾ ಹವ್ಯಾಸಿ ಪುರುಷ ಕಲಾವಿದರು ನಿಭಾಯಿಸುತ್ತಾರೆ. ತಂಡದಲ್ಲಿ ಗೃಹಿಣಿಯರೊಂದಿಗೆ ಉದ್ಯೋಗಿ ಮಹಿಳೆಯರೂ ಇರುವುದು ವಿಶೇಷ.
ಪರಿಪೂರ್ಣ ಮಹಿಳಾ ತಂಡ, ಯಕ್ಷಮಾತೆಯ ಸೇವೆ, ಕೊಂಕಣಿಯಲ್ಲಿ ಯಕ್ಷಗಾನ ಅಭಿರುಚಿ ಮೂಡಿಸುವಿಕೆ ಮುಂತಾದ ಆಶಯಗಳನ್ನು ಹೊಂದಿರುವ ತಂಡದ ಹುಟ್ಟು, ಸಾಧನೆ, ಬೆಳವಣಿಗೆ ಗಮನಾರ್ಹ. ಇನ್ನು, ತಂಡವನ್ನು ಎತ್ತರಕ್ಕೇರಿಸುವ ಜವಾಬ್ದಾರಿ, ಮಾತೃಭಾಷಾ ಪ್ರೇಮಿ ಕಲಾಸಕ್ತರ ಮೇಲಿದೆ. "ವಾಗೆªàವಿ ಕೊಂಕಣಿ ಮಹಿಳಾ ಯಕ್ಷರಂಗ' ನಮ್ಮ ಯಕ್ಷರಂಗದಲ್ಲಿ ಅಪೂರ್ವ ಸಾಧನೆ ಮಾಡಲಿ ಎಂಬುದು ಸಹೃದಯರ ಹಾರೈಕೆ.
ಕೃಪೆ : www.udayavani.com
|
|
|